ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ “ಅಜ್ಜ ಭಗವದ್ಗೀತೆ ಪುಸ್ತಕವನ್ನು ನಾನೂ ಓದಲು ಪ್ರಯತ್ನಿಸಿದೆ. ಆದರೆ ನನಗೆ ಏನೂ ಅರ್ಥವಾಗಲಿಲ್ಲ. ಅರ್ಥವಾದ ಅಲ್ಪಸ್ವಲ್ಪ ಕೂಡ ನೆನಪಿನಲಿ ಉಳಿಯುವುದಿಲ್ಲ” ಎಂದ. ಅಜ್ಜ “ಅರ್ಥವಾದರೂ, ಅರ್ಥವಾಗದಿದ್ದರೂ, ನೆನಪಿನಲ್ಲುಳಿದರೂ, ನೆನಪಿನಲ್ಲುಳಿಯದಿದ್ದರೂ ಓದಲೇಬೇಕಾದ ಗ್ರಂಥಗಳು ಇವು” ಎಂದರು. ಮೊಮ್ಮಗ “ಅರ್ಥವಾಗದ, ನೆನಪಿನಲ್ಲಿ ಉಳಿಯದ ಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ? ” ಎಂದ.
ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ “ನಿನ್ನೆ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ. ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ. ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿಕೊಂಡು ಬಾ” ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ. ಇದ್ದಿಲು ಹಾಕಿಟ್ಟಿದ್ದುದರಿಂದ ಜೋಳಿಗೆ ಕಪ್ಪು ಕಪ್ಪಾಗಿತ್ತು. ಆತ ಅದನ್ನು ತೆಗೆದುಕೊಂಡು ನದಿಗೆ ಹೋದ. ಜೋಳಿಗೆಯನ್ನು ನೀರಿನಲ್ಲಿ ಅದ್ದಿ ನೀರು ತುಂಬಿಸಿಕೊಂಡು ಮನೆ ಕಡೆ ಧಾವಿಸಿದ.
ಜೋಳಿಗೆ ಬಟ್ಟೆಯದಾದ್ದರಿಂದ ಮನೆಗೆ ಬರುವಷ್ಟರಲ್ಲಿ ನೀರೆಲ್ಲ ಸೋರಿಹೋಗಿತ್ತು. ಮೊಮ್ಮಗ ಅಜ್ಜನಿಗೆ “ಜೋಳಿಗೆಯಲ್ಲಿ ನೀರು ತರುವುದು ಕಷ್ಟ. ಇಲಿಗೆ ಬರುವಷ್ಟರಲ್ಲಿ ಎಲ್ಲ ಸೋರಿಹೋಗುತ್ತದೆ. ಬಿಂದಿಗೆಯಲ್ಲಿ ನೀರು ತರಲೇ?” ಎಂದು ಕೇಳಿದ. ಅಜ್ಜ “ನನಗೆ ಬಿಂದಿಗೆಯ ನೀರು ಬೇಡ. ಜೋಳಿಗೆಯ ನೀರೇ ಬೇಕು” ಎಂದರು. ಮೊಮ್ಮಗ ಮತ್ತೊಮ್ಮೆ ನದಿಗೆ ಧಾವಿಸಿ, ಜೋಳಿಗೆಯಲ್ಲಿ ನೀರು ತುಂಬಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಮತ್ತೆ ನೀರೆಲ್ಲ ಸೋರಿಹೋಗಿತ್ತು. ಅಜ್ಜ “ಮತ್ತೆ ಹೋಗು. ಜೋಳಿಗೆಯಲ್ಲೇ ನೀರು ತೆಗೆದುಕೊಂಡು ಬಾ” ಎಂದರು. ಮೊಮ್ಮಗ ಮತ್ತೆ ನದಿಗೆ ಓಡಿದ. ಅಪರೂಪದ ಮೊಮ್ಮಗ, ಅಜ್ಜನ ಮಾತನ್ನು ಚಾಚೂ ತಪ್ಪದೆ, ಪ್ರತಿಭಟಿಸದೇ ಪಾಲಿಸುತ್ತಿದ್ದ. ಹೀಗೆ ಹತ್ತು ಸಾರಿ ನಡೆಯಿತು. ಆದರೆ ಜೋಳಿಗೆಯಲ್ಲಿ ನೀರು ತರಲಾಗಲಿಲ್ಲ.
ಮೊಮ್ಮಗ “ಅಜ್ಜಾ ! ನಾನು ಹತ್ತಲ್ಲ ನೂರು ಸಾರಿ ಪ್ರಯತ್ನಿಸಿದರೂ ಜೋಳಿಗೆಯಲ್ಲಿ ನೀರು ತರಲಾಗುವುದಿಲ್ಲ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸೋರಿ ಹೋಗುತ್ತದೆ” ಎಂದ. “ಮಗೂ, ನೀರು ಸೋರಿ ಹೋಗುತ್ತದೆಂಬುದು ನಿಜ. ಚಿಂತೆಯಿಲ್ಲ. ಆದರೆ ಜೋಳಿಗೆ ಈಗ ಹೇಗಾಗಿದೆ ನೋಡು!” ಎಂದರು. ಮೊದಲನೆಯ ಸಾರಿ ನದಿಗೆ ಹೋದಾಗ ಜೋಳಿಗೆ ಇದ್ದಿಲಿನ ಕಪ್ಪು ಬಣ್ಣದಲ್ಲಿತ್ತು. ಈಗ ಹತ್ತು ಸಾರಿ ನದಿಗೆ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಕಪ್ಪು ಜೋಳಿಗೆ ಬಿಳಿಯ ಜೋಳಿಗೆಯಾಗಿತ್ತು ! ಅಂದರೆ ಕೊಳೆಯನ್ನೆಲ್ಲ ಕಳೆದುಕೊಂಡು ಶುಭ್ರವಾಗಿತ್ತು! ಆಗ ಅಜ್ಜ “ಭಗವದ್ಗೀತೆಯನ್ನು ಓದಿದಾಗ ಅರ್ಥವಾಗದಿರಬಹುದು, ಓದಿದ್ದು ನೆನಪಿನಲ್ಲಿ ಉಳಿಯದಿರಬಹುದು, ಆದರೆ ಓದುವಾತನ ಬುದ್ಧಿ ಶುದ್ದಿಯಾಗುತ್ತದೆ. ಅದಕ್ಕಾಗಿ ಭಗವದ್ಗೀತೆಯನ್ನು ಓದಬೇಕು” ಎಂದರಂತೆ.