ರಾಜಕೀಯ
ಕೊಟ್ಟ ಬರವಸೆಗಳನ್ನು ಈಡೇರಿಸಿರುವುದಕ್ಕೆ ಬಿಜೆಪಿಗೆ ಹೊಟ್ಟೆಉರಿ: ಪರಮೇಶ್ವರ್

ಕೊರಟಗೆರೆ : ಕಳೆದ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿರುವುದಕ್ಕೆ ಬಿಜೆಪಿಯವರಿಗೆ ಹೊಟ್ಟೆ ಉರಿಯಾಗಿದೆ. ಇದರಿಂದ ಸರ್ಕಾರದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆಯ ರಾಜೀವ್ ಭವನದ ಮುಂಭಾಗದ ಆವರಣದಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮುಖಂಡರಾದ ಮಹಾಲಿಂಗಪ್ಪ ಮತ್ತು ಪ್ರೇಮ ಮಹಾಲಿಂಗಪ್ಪ ಹಾಗೂ ವಿವಿಧ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಬಳಿಕ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲ ಬಡ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಪಕ್ಷದ ಬದ್ಧತೆ. ಇದಕ್ಕಾಗಿ 168 ಕೋಟಿ ರೂ.ಖರ್ಚು ಮಾಡಿ, ಜಾತಿಗಣತಿ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿಯಿಂದ ಸಮುದಾಯಗಳ ಸ್ಥಿತಿಗತಿ ಏನೆಂಬುದು ಗೊತ್ತಾಗಲಿದೆ. ವಿಶೇಷ ಯೋಜನೆಗಳನ್ನು ನೀಡಲು ಜಾತಿಗಣತಿ ವರದಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಾತಿಗಣತಿ ವಿಚಾರವಾಗಿ ನಮ್ಮ ಪಕ್ಷವನ್ನು ಮೇಲ್ಜಾತಿಯ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ನಾವು ಯಾವುದೇ ಜಾತಿಯ ವಿರೋಧಿಗಳಲ್ಲ. ಸಂವಿಧಾನದ ಆಶಯಗಳಿಗೆ ಗೌರವ ಕೊಟ್ಟು ಕೆಲಸ ಮಾಡುವವರು. ಧರ್ಮವನ್ನು ಆಧಾರವಾಗಿಟ್ಟುಕೊಂಡು ಒಡೆದು ಆಳುವ ಕೆಲಸ ಮಾಡುತ್ತಿರುವ ಬಿಜೆಪಿಯವರಿಗೆ ಮತ್ತೊಮ್ಮೆ ಓಟು ನೀಡಬೇಕೆ? ಇಂದಿಗೂ ದೇವಸ್ಥಾನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದೇಶದ 140 ಜನಸಂಖ್ಯೆಯಲ್ಲಿ ಶೇ 18ರಷ್ಟು ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಅವರನ್ನು ದೇಶ ಬಿಟ್ಟು ಓಡಿಸುತ್ತೀರ? ನೀವು ಮಾಡುತ್ತಿರುವ ತಪ್ಪಿನ ಅರಿವಿದೆಯೇ? ಇದಕ್ಕೆ ಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ. ಕೆಟ್ಟ ರಾಜಕಾರಣ ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಹೇಳಿದರು.
ಕಳೆದ ಹತ್ತು ವರ್ಷದಿಂದ ದೇಶದಲ್ಲಿ ಏನಾಗಿದೆ ಎಂಬುದನ್ನು ಗಮನಿಸಿದ್ದೀರಿ. 2014ರಲ್ಲಿ ನರೇಂದ್ರ ಮೋದಿಯವರು ಕನಸನ್ನು ಮಾರಾಟ ಮಾಡಿದರು. ಕಾಂಗ್ರೆಸ್ನವರು ಸ್ವಿಸ್ ಬ್ಯಾಂಕ್ನಲ್ಲಿ ಕಪ್ಪು ಹಣ ಇಟ್ಟಿದ್ದಾರೆ. ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ನಾಗರೀಕನ ಖಾತೆಗೆ, ಅಧಿಕಾರಕ್ಕೆ ಬಂದ 100 ದಿನದೊಳಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು. ಒಬ್ಬ ಬಿಜೆಪಿ ಮುಖಂಡನಾದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಜಿಎಸ್ಟಿ ಕಟ್ಟುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದೇವೆ. ಮಸಲೆ ದೋಸೆ ತಿಂದರು ಸಹ ಶೇ.18ರಷ್ಟು ತೆರಿಗೆ ಹಾಕುತ್ತಿದ್ದಾರೆ. ರಾಜ್ಯದ ಜಿಎಸ್ಟಿ ಸಂಗ್ರಹಣೆಯ ಪಾಲು ನೀಡಿಲ್ಲ. ರಾಜ್ಯದ 224 ತಾಲ್ಲೂಕುಗಳಲ್ಲಿ ತೀವ್ರ ಬರ ಎದುರಾಗಿದೆ. ಈವರೆಗೆ ಎನ್ಡಿಆರ್ಎಫ್ ನಿಧಿಯಲ್ಲಿ ಒಂದು ರೂ. ಅನುದಾನ ನೀಡಿಲ್ಲ. ಬರಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದರು.
ನಮಗೂ ಶ್ರೀರಾಮನೇ
ಶ್ರೀರಾಮ ನಿಮಗೆ ಮಾತ್ರ ಶ್ರೀರಾಮನ? ನಮಗೂ ಶ್ರೀರಾಮ, ನಾನು ಸಹ ಜೈ ಶ್ರೀರಾಮ ಎಂದು ಹೇಳುತ್ತೇನೆ. ನಾನು ಚಿಕ್ಕವನಿದ್ದಾಗ ಶ್ರೀರಾಮ ನವಮಿ ದಿನ ಜನರಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ ಹಂಚಿದ್ದೇನೆ. ಬಿಜೆಪಿಯವರಿಗೆ 25 ವರ್ಷಗಳಿಂದ ಶ್ರೀರಾಮ ಬಂದಿದ್ದಾನೆ. ಕೋಮುವಾದಿ ಬಿಜೆಪಿಯವರನ್ನು ಎಷ್ಟು ದೂರ ಇಡುತ್ತೇವೆಯೋ ದೇಶಕ್ಕೆ ಅಷ್ಟು ಒಳ್ಳೆಯದು ಎಂದು ಹರಿಹಾಯ್ದರು.
ಸಂಸತ್ನಲ್ಲಿ ಮುದ್ದಹನುಮೇಗೌಡರ ಧ್ವನಿ
ಮುದ್ದಹನುಮೇಗೌಡ ಅವರು ಈ ಹಿಂದೆ ಸಂಸತ್ ಸದಸ್ಯರಾಗಿದ್ದಾಗ ತುಮಕೂರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಅಲ್ಲದೇ ಯುನೈಟೆಡ್ ನೇಷನ್ಸ್ನಲ್ಲಿ ಭಾರತದ ಪ್ರತಿ ನಿಧಿಯಾಗಿ ಮಾತನಾಡಿ ಜಿಲ್ಲೆಗೆ ಗೌರವ ತಂದು ಕೊಟ್ಟಿದ್ದಾರೆ. ಹೀಗಾಗಿ ಪಕ್ಷದ ಹೈಕಮಾಂಡ್ ಮುದ್ದಹನುಮಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಟಿಕೆಟ್ ನೀಡಿದೆ. ನಾವೆಲ್ಲ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿ ಮನೆಮನೆಗೆ ಹೋಗಿ ತಿಳಿಸಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಶ್ರೀನಿವಾಸ್, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದ ಹನುಮೇಗೌಡ, ಮಾಜಿ ಶಾಸಕರಾದ ರಫಿಕ್ ಅಹ್ಮದ್, ಗಂಗಹನುಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?