Featured
ಕೊರೋನಾ ಪೀಡಿತರು ತೀವ್ರಗತಿಯಲ್ಲಿ ಚೇತರಿಕೆ- 66% ರಷ್ಟು ರೋಗಿಗಳು ಗುಣಮುಖ- ಕೊರೊನಾ ಮುಕ್ತಮಾಡಲು ಜನರ ಸಹಕಾರವೇ ಅತೀ ಮುಖ್ಯ

ರೈಸಿಂಗ್ ಕನ್ನಡ:
ಕಲಬುರಗಿ:
ದೇಶದಲ್ಲಿಯೇ ಮಹಾಮಾರಿ ಕೊರೋನಾ ಸೋಂಕಿಗೆ ಮೊದಲ ಮೃತ ಪ್ರಕರಣ ವರದಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ. ಈಗ ಕೊರೋನಾ ಪೀಡಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿರುವುದು ಕೂಡ ಕಲಬುರಗಿ ಜಿಲ್ಲೆಯಲ್ಲೇ. ಕೊರೊನಾ ಸೋಂಕಿತರ ಪೈಕಿ 66%ರಷ್ಟು ಜನ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ
– ಶರತ್ ಬಿ. ಜಿಲ್ಲಾಧಿಕಾರಿ ಕಲಬುರಗಿ
Advertisement
ಕಲಬುರಗಿ ಜಿಲ್ಲೆಯಲ್ಲಿ ಜೂನ್ 24ರ ವರೆಗೆ ಪತ್ತೆಯಾದ 1254 ಕೊರೋನಾ ಪೀಡಿತರ ಪೈಕಿ 829 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಗುಣಮುಖರಾದವರ ಪ್ರಮಾಣ ಶೇ.66 ರಷ್ಟಿದೆ. ಪ್ರಸ್ತುತ 412 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪ್ರಮಾಣ ಶೇ.33. ಉಳಿದಂತೆ ಕೋವಿಡ್-19 ಸೋಂಕಿಗೆ 13 ಜನ ನಿಧನ ಹೊಂದಿದ್ದು, ಮರಣ ಪ್ರಮಾಣ ಶೇ.1 ರಷ್ಟು ಮಾತ್ರ. ಸೋಂಕಿಗೆ ಕೊನೆಯುಸಿರೆಳದ 13 ಜನರಲ್ಲಿ 60 ಮತ್ತು ಮೇಲ್ಪಟ್ಟ ಹಾಗೂ 55 ಮತ್ತು ಮೇಲ್ಪಟ್ಟ ವಯಸ್ಸಿನ ತಲಾ 5 ಜನರಿದ್ದಾರೆ. ಮರಣ ಹೊಂದಿದ 13 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಕೊರೋನಾ ಪೀಡಿತ 1254 ಜನರ ಹಿನ್ನೆಲೆ ನೋಡಿದಾಗ 1033 ಸೋಂಕಿತರು (ಶೇ.82) ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ, 160 ಸೋಂಕಿತರು (ಶೇ.12.75) ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು, 20 ಸೋಂಕಿತರು (ಶೇ.1.59) ಮಹಾರಾಷ್ಟ್ರ ಹೊರತುಪಡಿಸಿ ಇತರೆ ರಾಜ್ಯ ಪ್ರವಾಸ ಹಿನ್ನೆಲೆ, 17 ಸೋಂಕಿತರು (ಶೇ.1.37) ಐ.ಎಲ್.ಐ ಹಿನ್ನೆಲೆ, 17 ಸೋಂಕಿತರು (ಶೇ.1.35) ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಹಾಗೂ 7 ಸೋಂಕಿತರು (ಶೇ.0.56) ಹೊರ ದೇಶ ಪ್ರವಾಸ ಹಿನ್ನೆಲೆಯಿಂದ ಸೋಂಕಿಗೆ ಗುರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಪೀಡಿತ 412 ರೋಗಿಗಳ ಪೈಕಿ ಕೇವಲ 9 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಸಾಮಾನ್ಯ ವಾರ್ಡ್ನಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಪ್ರಸ್ತುತ ಕೋವಿಡ್ 19 ಸೋಂಕಿತ ಪೈಕಿ ಯಾರೂ ಕೂಡ ವೆಂಟಿಲೇಟರ್ ಸಹಾಯದ ಮೂಲಕ ಚಿಕಿತ್ಸೆ ಪಡೆಯುತ್ತಿಲ್ಲ.
ಮಾರ್ಚ್ 10 ರಂದು ಕಲಬುರಗಿ ನಗರದ 76 ವರ್ಷದ ವಯೋವೃದ್ಧ ಸೌದಿ ಅರೇಬಿಯಾ ಪ್ರವಾಸ ಹಿನ್ನೆಲೆ ಮತ್ತು ವಯೋಸಹಜ ಕಾಯಿಲೆಯಿಂದ ಕೊರೋನಾ ಸೋಂಕಿಗೆ ತುತ್ತಾಗಿ ನಿಧನಗೊಂಡಿದ್ದರು. ಅಂದಿನಿಂದಲೆ ಜಿಲ್ಲೆಯಲ್ಲಿ ಒಂದು ರೀತಿಯ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ರೀತಿಯಲ್ಲಿ ದೇಶದಲ್ಲಿ ಮೊದಲ ಸ್ವಯಂಘೋಷಿತ ಲಾಕ್ ಡೌನ್ ಇದಾಗಿತ್ತು.
ಲಾಕ್ ಡೌನ್ 3.0., 4.0 ಮತ್ತು ತದನಂತರ ದೇಶದಾದ್ಯಂತ ಲಾಕ್ ಡೌನ್ನಿಂದ ಸಿಲುಕಿಕೊಂಡ ವ್ಯಕ್ತಿಗಳು, ವಲಸೆ ಕಾರ್ಮಿಕರು, ಹಾಗೂ ಪ್ರವಾಸಿಗರು ತವರು ರಾಜ್ಯಕ್ಕೆ ಮರಳಲು ಅವಕಾಶ ಕಲ್ಪಿಸಿದ ಪರಿಣಾಮ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ವಲಸೆ ಕಾರ್ಮಿಕರು ಮರಳಿದರು. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಇಳಿಮುಖವಾಗಿದೆ.
ಕೊರೋನಾ ಪೀಡಿತರ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮರಣ ಪ್ರಮಾಣ ಕೇವಲ ಶೇ.1ರಷ್ಟಿದೆ. ಹೀಗಾಗಿ ಕೊರೋನಾ ಸೋಂಕಿಗೆ ಯಾರು ಆತಂಕಕ್ಕೊಳಗಾಗದೆ ಎಚ್ಚರಿಕೆಯ ಜೀವನ ನಡೆಸಬೇಕಾಗಿದೆ. ಲಾಕ್ ಡೌನ್ ಸಡಿಲಿಕೆ ನೀಡಿದ ಕಾರಣ ಯಾರು ಅನಗತ್ಯ ತಿರುಗಾಡಬಾರದು.
ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವುದಲ್ಲದೆ ಅಗತ್ಯ ಸಹಕಾರ ನೀಡಬೇಕು. ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದನ್ನು ಅಭ್ಯಾಸವಾಗಿ ಮಾಡಿಕೊಂಡಿದಲ್ಲಿ ಕಲಬುರಗಿಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದ್ದು, ಜಿಲ್ಲೆಯ ಮಹಾಜನತೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರು ಮನವಿ ಮಾಡಿದರು.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ : ಒಮಿಕ್ರಾನ್ ಅಲರ್ಟ್..!