Featured
ಬರಿಗಾಲಲ್ಲಿ ನಡೆದು, ತಮಿಳು ಮಾಧ್ಯಮದಲ್ಲಿ ಓದಿ, ವಿಜ್ಞಾನಿಯಾದ ರೈತನ ಮಗ ಶಿವನ್ ಜೀವನಚರಿತ್ರೆ ಹಳ್ಳಿಹುಡುಗನ ಯಶೋಗಾಥೆ

ರೈಸಿಂಗ್ ಕನ್ನಡ
ಬೆಂಗಳೂರು: ಚಂದ್ರಯಾನ 2 ಕೊನೆ ಪ್ರಯತ್ನ ವಿಫಲವಾಗುತ್ತಿದ್ದಂತೆ ಬಡ ಇಸ್ರೋ ಮುಖ್ಯಸ್ಥ ಶಿವನ್ ಕಣ್ಣಲ್ಲಿ ನೀರು ಜಿನುಗುತ್ತಿತ್ತು, ವಿರಾಜಮಾನವಾಗಿ ನೇರ ಪ್ರಸಾರ ವೀಕ್ಷಣೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೇಗೆ ಹೇಳಬೇಕು ಎಂಬ ಸಂಕೋಚ ಕಾಡಿತ್ತು. ನಿಧಾನವಾಗಿ ಈ ರೋವರ್ ಚಂದ್ರನ ಅಂಗಳ ಸ್ಪರ್ಶಿಸುವುದು ಕಷ್ಟ ಎಂದು ಭಾರವಾದ ಹೃದಯದಿಂದ ಹೇಳಿದರು. ಇದೆಲ್ಲಾ ನೋಡುತ್ತಿದ್ದ ಜನರಿಗೆ ಸಾಧಾರಣ ವ್ಯಕ್ತಿ ಎಲ್ಲದರ ರೂವಾರಿಯೇ ಎಂಬ ಪ್ರಶ್ನೆ ಮೂಡಿರಲಾರದು.
ನಿಜ ಅಸಮಾನ್ಯ ಪ್ರತಿಭೆಯ ಈ ವ್ಯಕ್ತಿ ಇಸ್ರೋ ಅಧ್ಯಕ್ಷ ಕೆ.ಶಿವನ್ ( ತಮಿಳಿನಲ್ಲಿ ಸಿವನ್ ) ಸಾಮಾನ್ಯ ರೈತನ ಮಗನಾಗಿ ಬೆಳೆದು ಬಂದವರು. ಇವರ ತಂದೆ ತಮ್ಮ ಮಗ ಕೆಲಸಕ್ಕೆ ನೆರವಾಗಲಿ ಅಂತ ಸಮೀಪದ ಶಾಲಾ ಕಾಲೇಜಿಗೆ ಸೇರಿಸುತ್ತಿದ್ದರು ಎಂದು ಕೇಳಿದೊಡನೆ ಎಷ್ಟೋ ರೈತರ ಮಕ್ಕಳಿಗೆ ತಮ್ಮ ಬಾಲ್ಯ ನೆನಪಾಗದೇ ಇರಲಾರದು.
ಕಳೆದ ವರ್ಷ ಇಸ್ರೋ ಮುಖ್ಯಸ್ಥನಾಗಿ ನಿಯೋಜನೆಯಾದ ಶಿವನ್ ರ ಬಾಲ್ಯ ಸಾಮಾನ್ಯ ಬಡ ಕುಟುಂಬದ ಚಿತ್ರಣ ತೆರೆದಿಡುತ್ತೆ.
ಇಡೀ ಕುಟುಂಬದಲ್ಲಿ ಉನ್ನತ ವ್ಯಾಸಂಗ ಮಾಡಿದ ಮೊದಲಿಗರು ಕೂಡ ಇವರೇ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಗರಕೊಯಿಲ್ ಬಳಿಯ ಪುಟ್ಟ ಹಳ್ಳಿ ಸರಕ್ಕಲ್ವಿಳೈ. ಇಲ್ಲಿ ಒಂದೆರಡು ಎಕರೆ ಜಮೀನಿನಲ್ಲಿ ಮಾವಿನ ತೋಪು ಮಾಡಿಕೊಂಡಿದ್ದ ಕೈಲಾಸಪಿಳೈ ಎಂಬ ರೈತ, ತನ್ನ ಮಗ ಇಸ್ರೋ ಮುಖ್ಯಸ್ಥನಾಗುತ್ತಾನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕವನಿದ್ದಾಗ ತಂದೆ ಜೊತೆ ಕೆಲಸಕ್ಕೆ ಹೋಗುವುದು ಮಾಮೂಲಾಗಿತ್ತು, ನಮ್ಮ ತಂದೆ ಕೆಲಸಕ್ಕೊಂದು ಆಳು ಸಿಗ್ತು ಅಂದುಕೊಳ್ತಿದ್ದರು, ನಮ್ಮ ಜೀವನ ಆ ಕಾಲಕ್ಕೆ ಹೊಟ್ಟೆತುಂಬಿಸಿಕೊಳ್ಳುವುದಕ್ಕಷ್ಟೇ ಆಗ್ತಿತ್ತು. ಸಾಮಾನ್ಯ ರೈತ ತನ್ನ ಮಕ್ಕಳಿಗೆ ಮೂರು ಹೊತ್ತು ಊಟ ಹಾಕೋದು ಕಷ್ಟವಾಗ್ತಿದ್ದ ಸಂದರ್ಭ ಅಂದು ಇತ್ತು ಎಂದು ಶಿವನ್ ನಗುಮೊಗದಿಂದಲೇ ಹೇಳ್ತಾರೆ.
ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಬಿ-ಟೆಕ್ ಮಾಡಲು ಹೋಗುವವರೆಗೂ ಬರಿಗಾಲಲ್ಲೇ ಕಾಲ ಕಳೆದ ಶಿವನ್ ಮುಚ್ಚು ಮರೆಯಿಲ್ಲದೇ ಹೌದು, ಬರಿಗಾಲು ಹಾಗೂ ಧೋತಿ ನಮ್ಮ ಉಡುಗೆ ತೊಡುಗೆಯಾಗಿತ್ತು. ನಾನು ಸಾಮಾನ್ಯ ಶಾಲಾ ಕಾಲೇಜುಗಳಲ್ಲಿ ಓದಿರೋದಕ್ಕೆ ನಮ್ಮ ತಂದೆಯವರ ಆರ್ಥಿಕ ಲೆಕ್ಕಾಚಾರ ಕಾರಣ. ಅವರಿಗೊಂದು ಆಳು ಉಳಿತೀತ್ತು ಎಂದುಕೊಂಡು ಸಮೀಪದಲ್ಲೇ ಇರುವ ಶಾಲಾ ಕಾಲೇಜಿನಲ್ಲಿ ಓದಿಸಿದರು. ಆದರೆ ಉನ್ನತ ವ್ಯಾಸಂಗಕ್ಕೆ ಒಂದಿಷ್ಟು ಗುಂಟೆ ಜಮೀನು ಮಾರಿದ್ದರು. ನನ್ನ ಜೀವನದಲ್ಲಿ ನಾನೇನು ಆಗಬೇಕು ಎಂದುಕೊಂಡಿದ್ದೆನೋ ಆದು ಆಗಲಿಲ್ಲ, ಆದರೆ ಇಷ್ಟು ದೂರ ದೇವರು ತಂದುಬಿಟ್ಟ ಎನ್ನುತ್ತಾರೆ.
ನಾನು ಎಂಜಿನಿಯರಿಂಗ್ ಮಾಡಬೇಕು ಎಂದುಕೊಂಡೆ, ಆದರೆ ಬಿಎಸ್ಸಿ ಮಾಡಬೇಕಾಯ್ತು, ಬಿಎಸ್ ಸಿ ಆದಮೇಲೆ ಎಂಎಸ್ಸಿ ಮಾಡಬೇಕು ಎಂದುಕೊಂಡೆ ಆದರೆ ಬಿಟೆಕ್ಗೆ ಸೇರಿಕೊಂಡೆ, ಬಿಟೆಕ್ ಆದ ಬಳಿಕ ಕೆಲಸಕ್ಕೆ ಸೇರೋಣ ಎಂದರೆ ಐಐಎಸ್ಸಿಗೆ ಇಂಟರ್ನ್ ಆಗಿ ಅವಕಾಶ ಬಂತು, ಇದಾದ ಮೇಲೆ ಸ್ಯಾಟಲೈಟ್ ಸೆಕ್ಷನ್ ಸೇರಿಕೊಳ್ಳಬೇಕು ಎಂದುಕೊಂಡೆ ಆದರೆ ವಿಕ್ರಮ್ಭಾಯಿ ಸ್ಪೇಸ್ ಸೆಂಟರ್ಗೆ ಬಂದೆ ಅಲ್ಲೂ ಕೂಡ ಪಿಎಸ್ಎಲ್ವಿ ಪ್ರಾಜೆಕ್ಟ್ಗೆ ನನ್ನನ್ನ ನಿಯೋಜನೆ ಮಾಡಲಾಯ್ತು. ಹೀಗೆ ನಾನೇನು ಮಾಡಬೇಕು ಎಂದುಕೊಂಡಿದ್ದೆ ಅದನ್ನ ಮಾಡಲಾಗಲಿಲ್ಲ ಎನ್ನುತ್ತಾರೆ.
ಶಿವನ್ ಇಸ್ರೋದಲ್ಲಿ ಇದ್ದಕ್ಕಿದ್ದಂತೆ ಮೇಲೆ ಬಂದು ಮುಖ್ಯಸ್ಥನಾಗಿಲ್ಲ, ಪ್ರತೀ ಹಂತದಲ್ಲೂ ಸಾಕಷ್ಟು ಸಂಶೋಧನೆ ಹಾಗೂ ಅನ್ವೇಷಣೆ ಮಾಡಿ ಗೆಲ್ಲುತ್ತಾ ಬಂದಿದ್ದರು. ಚಂದ್ರಯಾನ ೨ರ ವೈಫಲ್ಯ ಇವರ ಒಟ್ಟು ಸಾಧನೆಯನ್ನ ಕಿಂಚಿತ್ತೂ ಕಡಿಮೆಮಾಡಲಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಂದ್ರಯಾನದ ಬಗ್ಗೆ ಶಹಬ್ಬಾಸ್ ಪಡೆದುಕೊಂಡಿರುವ ನಮ್ಮ ದೇಶ ಇಂತಹ ಬದ್ಧತೆ ಇರುವ ವಿಜ್ಞಾನಿಗಳಿಂದ ಇನ್ನಷ್ಟು ಮೈಲಿಗಲ್ಲುಗಳನ್ನ ಸ್ಥಾಪಿಸಲಿ.