Featured
ಸೀತಾಮಾತೆಗೊಂದು ಮಂದಿರ ಬ್ರಿಟೀಷಪ್ಪ ಕಟ್ಟಿಸಿಕೊಟ್ಟ..!

ಬರಹ: ಡಾ.ಬಸವರಾಜ್ ಗುರೂಜಿ, ಖ್ಯಾತ ಜ್ಯೋತಿಷ್ಯರು, ವಾಸ್ತುತಜ್ಞರು ಮತ್ತು ಆಧ್ಯಾತ್ಮಿಕ ಚಿಂತಕರು
ತಮಿಳುನಾಡಿನ ಚಂಗಲ್ಪೇಟೆಗೆ ಹದಿನೈದು ಮೈಲಿಗಳ ದೂರದಲ್ಲಿ ಮಧುರಾಂತಕ ಎನ್ನುವ ಊರಿನಲ್ಲಿ ಆ ದೇವಾಲಯವಿದೆ.
ಅಲ್ಲಿ ದೊಡ್ದದೊಂದು ಕೆರೆಯಿದೆ. ಹನ್ನೆರಡು ಚದರ ಮೈಲಿ ಅದರ ವಿಸ್ತಾರ. ಸಾವಿರಾರು ಎಕರೆ ಗದ್ದೆಗಳಿಗೆ ಅದು ಆಧಾರ. ಆದರೆ ಮಾಯದಂತ ಮಳೆ ಬಂತೆಂದರೆ ಆ ಕೆರೆ ನಾ ನಿಲ್ಲುವಳಲ್ಲ ಎನ್ನುತ್ತಿತ್ತು. ಕೆರೆ ತುಂಬಿತು ಎಂದರೆ ಊರೆಲ್ಲ ಮುಳುಗುತ್ತಿತ್ತು. ಊರಿಗೂ ಹಾನಿ, ದೇವರಗುಡಿಗೂ ಹಾನಿ. ಊರನ್ನು ಮುಟ್ಟುವುದೂ ಅಸಾಧ್ಯವಾಗುತ್ತಿತ್ತು.
ಅದು ಬ್ರಿಟಿಷರು ಭಾರತವನ್ನಾಳುತ್ತಿದ್ಡ ಕಾಲ. ಚಂಗಲ್ಪೇಟೆಯಲ್ಲಿ ಕರ್ನಲ್ ಪ್ಲೇಸ್ ಎಂಬ ಬ್ರಿಟಿಷಿನವನು ಜಿಲ್ಲಾಧಿಕಾರಿ. ಜನರೆಲ್ಲ ಆತನ ಮೊರೆಹೊಕ್ಕರು. ಸ್ಥಳಪರೀಕ್ಷೆ ಮಾಡಿದ ಅವರು ಅಲ್ಲೊಂದು ಸೇತುವೆ ಕಟ್ಟುವುದು ಸಮಸ್ಯೆಗೆ ಸಾರ್ವಕಾಲಿಕ ಪರಿಹಾರವೆಂದು ತೀರ್ಮಾನಿಸಿದರು. ಕೆಲಸ ಆರಂಭವಾಗಿ ಸೇತುವೆ ನಿರ್ಮಾಣವಾಗುತ್ತಿರುವಂತೆ ಮಾಯದಂತ ಮಳೆ ಬಂತು. ಸೇತುವೆ ನಾ ನಿಲ್ಲುವಳಲ್ಲ ಎನ್ನುತ್ತ ಕುಸಿದುಬಿತ್ತು. ಅಲ್ಲಿಯೇ ಮೊಕ್ಕಾಂ ಹೂಡಿದ್ದ ಜಿಲ್ಲಾಧಿಕಾರಿ ಕರ್ನಲ್ ಪ್ಲೇಸ್ ಮತ್ತೆ ಕಟ್ಟಲು ಆದೇಶವನ್ನಿತ್ತ. ಕೆಲಸ ಮುಗಿಯುವ ಮೊದಲೇ ಮತ್ತೆ ಮಳೆ, ಮತ್ತೆ ಸೇತುವೆಯ ಕುಸಿತ. ತಿಂಗಳಾನುಗಟ್ಟಲೆಯ ಪ್ರಯತ್ನ ವ್ಯರ್ಥ. ಆಗ ಅಲ್ಲಿದ್ದ ಒಬ್ಬ ಹಳೆಯ ತಲೆಮಾರಿನ ಮುದುಕಪ್ಪ “ದೊರೆಯೇ! ನಮ್ಮೂರ ಸೀತಮ್ಮನವರಿಗೆ ಸರಿಯಾದ ಗುಡಿಯಿಲ್ಲ. ಗುಡಿ ಕಟ್ಟಿಸುತ್ತೇನೆಂದು ಹರಕೆ ಹೊತ್ತುಕೊಂಡರೆ ಕೆರೆ ಏರಿ ಉಳಿಯಬಹುದೇನೋ” ಎಂದ. ಕೆಲಸ ಮುಗಿಸಲು ಎಲ್ಲದಕ್ಕೂ ಸಿದ್ಧವಿದ್ದ ಕರ್ನಲ್ ಗುಡಿ ಕಟ್ಟಿಸಿಕೊಡುತ್ತೇನೆಂದು ಹರಕೆ ಹೊತ್ತರು. ಕೆಲಸ ಪುನರಾರಂಭವಾಯಿತು. ಅಂದು ರಾತ್ರಿ ಮತ್ತೆ ಧಾರಾಕಾರ ಮಳೆ ಸುರಿಯಿತು. ಆತಂಕಗೊಂಡಿದ್ದ ಕರ್ನಲ್ ಪ್ಲೇಸ್ ಮಧ್ಯರಾತ್ರಿಯಲ್ಲಿ ಟಾರ್ಚ್ ಹಿಡಿದು ಮಳೆಯಲ್ಲಿ ನೆನೆಯುತ್ತಲೇ ಕೆಲಸ ನಡೆಯುತ್ತಿದ್ದ ಜಾಗಕ್ಕೆ ಬಂದು ನೋಡಿದ. ಆ ಮಳೆಯಲ್ಲೂ ಯಾರೋ ಒಬ್ಬಾತ ಬಿರುಕು ಬಿಡುತ್ತಿದ್ದ ಸೇತುವೆಗೆ ಮಣ್ಣು ತಂದು ಸೇರಿಸುತ್ತಿರುವಂತೆ, ಆತನಿಗೆ ಒಬ್ಬ ಹೆಂಗಸು ಮಕ್ಕರಿಯಲ್ಲಿ ಮಣ್ಣು ತಂದುಕೊಡುತ್ತಿರುವಂತೆ, ಅವರಿಗೆ ಅನೇಕ ಜನ ಸಹಾಯ ಮಾಡುತ್ತಿರುವಂತೆ ಕರ್ನಲ್ಗೆ ಭಾಸವಾಯಿತು. ಈ ಮಳೆಯಲ್ಲೂ ದುಡಿಯುತ್ತಿರುವ ಕೂಲಿಯವರಿಗೆ ಬೆಳಗ್ಗೆ ಭಕ್ಷೀಸು ಕೊಡಬೇಕೆಂದುಕೊಳ್ಳುತ್ತ ಆತ ಹೊರಟುಹೋದರು.
ಬೆಳಗ್ಗೆ ಬಂದು ನೋಡಿದಾಗ ಕಟ್ಟಡ ಭದ್ರವಾಗಿ ನಿಂತಿತು. ಆತ ರಾತ್ರಿ ತಾನು ಕಂಡದ್ದನ್ನು ವಿವರಿಸಿದಾಗ ಹಳೆಯ ಮುದುಕ “ನಿಮಗೆ ಕಂಡ ಆ ಹೆಣ್ಣು-ಗಂಡು ಮತ್ತಾರೂ ಅಲ್ಲ. ಅವರು ಸಾಕ್ಷಾತ್ ಸೀತಾರಾಮರು!” ಎಂದು ಘೋಷಿಸಿದ. ಅಂತೂ ಇಂತೂ ಕಟ್ಟಡದ ಕೆಲಸ ಮುಗಿಯಿತು. ಊರಿನ ಕಂಟಕ ನಿವಾರಣೆಯಾಯಿತು. ಕರ್ನಲ್ ಪ್ಲೇಸ್ ಸೀತಾಮಾತೆಗೆ ಮಂದಿರ ಕಟ್ಟಿಸಿಕೊಟ್ಟು ಹರಕೆ ತೀರಿಸಿದರು.
ಈಗಲೂ ಮಧುರಾಂತಕ ಊರಿನ ದೊಡ್ಡಕೆರೆಯ ಪಕ್ಕದಲ್ಲೇ ಆ ಮಂದಿರವಿದೆ. ಆ ರಾಮದೇವರಿಗೆ “ಏರಿಕಾಪಾತ್ತರಾಮನ್” ಎಂಬ ಹೆಸರಿದೆ. ದೇವಾಲಯದಲ್ಲಿರುವ ಶಿಲಾಶಾಸನ ಇದನ್ನು ವಿವರಿಸುತ್ತದೆ.