ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆಯ ದಂಡ ಜನಸಾಮಾನ್ಯರಿಗೆ ಪೆಂಡಭೂತದಂತೆ ಕಾಡುತ್ತಿದ್ದು ಹೊರಗಡೆ ಹೋಗಲೂ ಭಯಪಡುವಂತಾಗಿದೆ. ಸೆ.1 ರಿಂದ ಆರಂಭವಾದ ದುಬಾರಿ ದಂಡ ದೆಹಲಿಯಲ್ಲಿ ದಿನಕ್ಕೊಂದು ಕಥೆಯನ್ನ ತೆರೆದಿಡುತ್ತಿದೆ.
ದಕ್ಷಿಣ ದೆಹಲಿಯ ಶೇಕ್ ಸರಾಯಿ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ಟ್ರಾಫಿಕ್ ಪೊಲೀಸ್ರು ರಾಕೇಶ್ ಎಂಬಾತನನ್ನ ತಡೆದು ಪರಿಶೀಲನೆ ಮಾಡುವಾಗ ಆತ ಕಂಠಪೂರ್ತಿ ಕುಡಿದಿದ್ದ, ಹೊಸ ಕಾಯ್ದೆಯನ್ವಯ ಹನ್ನೊಂದು ಸಾವಿರ ರೂಪಾಯಿ ಚಲನ್ ಹರಿದ ಪೊಲೀಸರನ್ನ ಹಾಗೇ ನೋಡುತ್ತಾ ನಿಂತ, ಪರಿಪರಿಯಾಗಿ ದಂಡ ಕಡಿತಗೊಳಿಸಲು ಹೇಳಿದ ಆದರೆ, ಹೊಸ ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಅವಕಾಶ ಆತನಿಗೆ ಇಲ್ಲದೇ ಹೋಯ್ತು. ದಂಡ ಕಟ್ಟದೇ ಇದ್ದಾಗ ಬೈಕ್ ಬಿಟ್ಟು ಹೋಗುವಂತೆ ಹೇಳಿದರು.
ರಸ್ತೆ ಬದಿಗೆ ಬಂದ ರಾಕೇಶ್ ತನ್ನ ಬೈಕ್ ಇಂಧನ ಪೈಪ್ ತೆಗೆದು ಬೆಂಕಿ ಹಚ್ಚಿಯೇ ಬಿಟ್ಟ, ಜನರೆಲ್ಲಾ ಅವಕ್ಕಾಗಿ ನೋಡುತ್ತಾ ನಿಂತರು, ಪೊಲೀಸರು ತಕ್ಷಣ ಫೈರ್ ಎಂಜಿನ್ ಕರೆದು ಬೆಂಕಿ ನಂದಿಸಿದರು, ರಾಕೇಶ್ನನ್ನ ಹಿಡಿದು ಸ್ಫೋಟಕ ವಸ್ತುಗಳನ್ನ ಬಳಸಿ ಗಲಭೆ ಸೃಷ್ಟಿಸುವ ಆರೋಪದಡಿ ಹಾಗೂ ಮೋಸಗೊಳಿಸಿದ ಪ್ರಕರಣದಡಿ ಬಂಧಿಸಲಾಯಿತು.
ವಿಚಾರಣೆ ವೇಳೆ ರಾಕೇಶ್ ಪೊಲೀಸರ ಬಳಿ ತಾನು ಕುಡಿದಿದ್ದು ನಿಜ ಆದರೆ ಹದಿನೈದು ಸಾವಿರ ನೀಡಿ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡಿದ್ದೆ, ದಂಡನೇ 11ಸಾವಿರ ಆದರೆ ಬೈಕ್ ಉಳಿಸಿಕೊಳ್ಳುವ ಆಲೋಚನೆ ಹೇಗೆ ಬರಬೇಕು ಎಂದು ಹೇಳಿದ್ದಾನೆ.