ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅಂದ್ರೆ, ಸಿಟ್ಟು-ಸಿಡುಕು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿದೆ. ಅದರಲ್ಲೂ ಯಡಿಯೂರಪ್ಪ ಅವರನ್ನ ಸಮೀಪದಿಂದ ನೋಡಿರುವ ಪತ್ರಕರ್ತರಿಗೆ, ಬಿಎಸ್ವೈ ವ್ಯಕ್ತಿತ್ವದ ಪರಿಚಯ ಇರುತ್ತೆ. ತಮ್ಮ ಸಿಟ್ಟು-ಸಿಡುಕಿನಿಂದಲೇ ಹಲವರಿಂದ ವಿಮರ್ಶೆಗೆ ಒಳಗಾದವರು. ಸಿಡುಕು ಬುದ್ಧಿಯಿಂದಲೇ ಪಕ್ಷದ ಸದಸ್ಯರಿಂದ ದೂರಾದವರು. ಆದ್ರೆ, ಪರಿಸ್ಥಿತಿ ಈಗ ಆ ರೀತಿ ಇಲ್ಲ. ಯಾಕಂದ್ರೆ, 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಇದ್ದ ಬಿಜೆಪಿ ಹೈಕಮಾಂಡ್ ಈಗ ಇಲ್ಲ..!
ಹೊಸ ಯಡಿಯೂರಪ್ಪ ನೋಡ್ತೀರಿ..!
ಸ್ವತಃ ಬಿ.ಎಸ್. ಯಡಿಯೂರಪ್ಪ ಈ ಮಾತನ್ನ ಆರ್ಎಸ್ಎಸ್ ಮುಖಂಡರಿಗೆ ಹೇಳಿದ್ದಾರಂತೆ. ಬುಧವಾರ ಬೆಳಗ್ಗೆ ಆರ್ಎಸ್ಎಸ್ ಕಚೇರಿ ಕೇಶವ ಕೃಪಾದಲ್ಲಿ ಯಡಿಯೂರಪ್ಪ ಆರ್ಎಸ್ಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ಸಂಘದ ಪ್ರಮುಖ ಮುಕುಂದ್ ಜೊತೆ ಕೆಲ ಕಾಲ ಮಾತುಕತೆ ನಡೆಸಿ, ಸಲಹೆಗಳನ್ನೂ ಪಡೆದ್ರಂತೆ ಯಡಿಯೂರಪ್ಪ.
ಈ ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಮುಂದಿನ ದಿನಗಳು ಮುಳ್ಳಿನ ಹಾಸಿಗೆಯಂತೆ. ಬಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಯಡಿಯೂರಪ್ಪ ಅವರಿಗೆ ಆರ್ಎಸ್ಎಸ್ ಪ್ರಮುಖ ಮುಕುಂದ್ ಸಲಹೆ ನೀಡಿದ್ದಾರೆ. ಈ ವೇಳೆ, ಮಾತನಾಡಿರೋ ಯಡಿಯೂರಪ್ಪ ಹೌದು ಹೌದು ಎಂದಿದ್ದಾರೆ. ಈ ಹಿಂದೆ ಮಾಡಿರುವ ತಪ್ಪುಗಳನ್ನ ಮುಂದೆ ಮಾಡುವುದಿಲ್ಲ. ಮುಂದಿನ ಕೆಲವೇ ಕೆಲವು ತಿಂಗಳುಗಳಲ್ಲಿ ಸರ್ಕಾರಕ್ಕೆ ಹೊಸ ಇಮೇಜ್ ಇರುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಹಿಂದಿನ ಯಡಿಯೂರಪ್ಪಗೂ ಈಗಿನ ಯಡಿಯೂರಪ್ಪಗೂ ಸಾಕಷ್ಟು ಬದಲಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡು ಪಕ್ಷ ಸಂಘಟನೆ ಜೊತೆ ಉತ್ತಮ ಆಡಳಿತ ನೀಡೋದಾಗಿ ಬಿಎಸ್ವೈ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳನ್ನ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೋಡ್ತಿದ್ದಾರೆ. ಬಿಜೆಪಿ ಹೈಕಮಾಂಡ್ ತುಂಬಾ ಸ್ಟ್ರಾಂಗ್ ಆಗಿದೆ. ಹೀಗಾಗಿ, ಮೊದಲಿನಂತೆ ಅವರನ್ನ ಎದುರು ಹಾಕಿಕೊಂಡು ಸಾಗುವುದು ಕಷ್ಟ. ಅದ್ದರಿಂದ ಹೊಸ ಯಡಿಯೂರಪ್ಪ ಮತ್ತು ಹೊಸ ಆಡಳಿತವನ್ನ ನೀವು ನೋಡ್ತೀರಿ ಎಂದು ಯಡಿಯೂರಪ್ಪ ಹೇಳಿದ್ದಾರಂತೆ. ನೋಡೋಣ, ಯಡಿಯೂರಪ್ಪ ಯಾವ ರೀತಿ ಆಡಳಿತ ನಡೆಸ್ತಾರೆ..? ಹೈಕಮಾಂಡ್ ಜೊತೆ ಹೇಗೆ ಇರ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.