ನವದೆಹಲಿ: ಭಾರತದ ಸಂವಿಧಾನಲ್ಲಿ ಹಿಂದಿಯನ್ನ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಲಾದ ದಿನ ಸೆ.೧೪, ಈ ಕಾರಣದಿಂದ ದೇಶಾದ್ಯಂತ ಇಂದು ಹಿಂದಿ ದಿವಸ್ ಆಚರಿಸಲಾಗುತ್ತಿದ್ದು ಹಿಂದಿಯೇತರ ರಾಜ್ಯಗಳು ಮಾತ್ರ ಮಾತೃಭಾಷೆಯ ಮೇಲಿನ ಹಿಂದಿ ಹೇರಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಹಿಂದಿ ದಿನಕ್ಕೆ ವ್ಯಾಪಕ ವಿರೋಧವಿದ್ದರೂ ಗೃಹ ಸಚಿವ ಅಮಿತ್ ಶಾ ಮಾತ್ರ ಯಾವುದರ ಪರಿವೆಯೂ ಇಲ್ಲದೇ ಟ್ವೀಟ್ಗಳನ್ನ ಮಾಡಿ ಹಿಂದಿ ಭಾಷೆಯ ಮೇಲಿನ ಪ್ರೇಮವನ್ನ ಮೆರೆದಿದ್ದಾರೆ ಹಾಗೂ ಅವರ ಟ್ವೀಟ್ಗಳಲ್ಲಿ ಕೇಂದ್ರ ಸರ್ಕಾರದ ನಿಲುವೂ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅಮಿತ್ ಶಾ ಪ್ರಕಾರ, ಹಿಂದಿ ಭಾರತದಲ್ಲಿ ಅತೀ ಹೆಚ್ಚು ಮಾತನಾಡುವ ಭಾಷೆ, ಶೇ.೪೪ರಷ್ಟು ಜನರು ಈ ಭಾಷೆ ಮಾತಾಡ್ತಾರೆ, ಹಾಗಾಗಿ ಹಿಂದಿಯಿಂದ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯವಂತೆ, ಅಮಿತ್ ಶಾ ಟ್ವೀಟ್ನಲ್ಲಿ ಸರ್ಕಾರ ಮುಂದೇನು ಮಾಡಬಹುದು ಎಂಬುದರ ಸ್ಷಷ್ಟತೆ ಇದೆ, ಹಿಂದಿ ಜೊತೆ ಯಾವ ಪ್ರಾದೇಶಿಕ ಭಾಷೆಯೂ ಜೊತೆಯಾಗಿ ಸಾಗದ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅಭಿಪ್ರಾಯಕ್ಕೆ ಪಶ್ಚಿಮ ಬಂಗಾಳದಿಂದ ತಮಿಳುನಾಡಿನವರೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಮತಾ ಬ್ಯಾನರ್ಜಿ, ಅಸಾದುದ್ದಿನ್ ಓವೈಸಿ, ಸ್ಟಾಲಿನ್ ತಕ್ಷಣ ಪ್ರತಿಕ್ರಿಯೆ ನೀಡಿ ಹಿಂದಿ ಎಲ್ಲರ ಮಾತೃಭಾಷೆ ಅಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲೆಡೆ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು ಮಾಜಿ ಸಿಎಂ ಸಿದ್ದರಾಮಮಯ್ಯ ಹಾಗೂ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಧೋರಣೆಯನ್ನ ಖಂಡಿಸಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗಳೂ ಸೇರಿದಂತೆ ಕೇಂದ್ರ ಸರ್ಕಾರದ ನೌಕರಿ ಹಿಡಿಯಲು ಪ್ರಾದೇಶಿಕ ಭಾಷಿಗರಿಗೆ ಸಮಸ್ಯೆಯಾಗುತ್ತಿರುವುದು ಈ ಹಿಂದಿ ಭಾಷೆಯ ಲಾಭಿಯಿಂದಲೇ, ಇದು ಇನ್ನಷ್ಟು ಹೆಮ್ಮರವಾಗಿ ಬೆಳೆಯುವುದರೊಳಗೇ ಪ್ರಾದೇಶಿಕ ಭಾಷೆಯನ್ನ ಉಳಿಸುವತ್ತ ಚಿಂತನೆ ಮಾಡಬೇಕಿದೆ.