ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದ ಡಿಕೆ ಶಿವಕುಮಾರ್ರನ್ನ ಇಂದು ರೋಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಲಾಯಿತು, ಡಿಕೆ ಶಿವಕುಮಾರ್ಗೆ ಬೇಲ್ ನೀಡಬೇಕಾ ಬೇಡ್ವಾ ಎಂಬ ವಾದ ಪ್ರತಿವಾದ ನಂತರ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಡಿಕೆಶಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದರು. ಅದಕ್ಕೂ ಮೊದಲು ಡಿಕೆಶಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು.
ಡಿಕೆ ಶಿವಕುಮಾರ್ ರ ಆರೋಗ್ಯ ತಪಾಸಣೆ ಮಾಡುತ್ತಿರುವ ಆರೋಗ್ಯಾಧಿಕಾರಿಗಳ ನಿರ್ಧಾರದ ಮೇಲೆ ಇವತ್ತು ಜೈಲಿಗೆ ಕಳುಹಿಸಬೇಕಾ ಬೇಡ್ವಾ ಎಂಬುದು ತೀರ್ಮಾನವಾಗಲಿದೆ. ಇನ್ನು ಡಿಕೆ ಶಿವಕುಮಾರ್ ಜಾಮೀನು ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ನಾಳೆ ಜಾಮೀನು ಸಿಕ್ಕರೆ ಮಾತ್ರ ಡಿಕೆಶಿಗೆ ರಿಲೀಫ್ ಇಲ್ಲವಾದರೆ ನ್ಯಾಯಾಂಗ ಬಂಧನ ಮುಂದುವರಿಯಲಿದೆ.
ಇಂದು ಕೋರ್ಟ್ನಲ್ಲಿ ನಡೆದ ವಾದ ಪ್ರತಿವಾದಗಳ ಸಂಕ್ಷಿಪ್ತ ವಿವರ ಹೀಗಿದೆ…,
ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದೆ, ಅಧಿಕಾರಿಗಳ ವಾದದಲ್ಲಿ ಸತ್ಯಾಂಶವಿಲ್ಲ, ಇ.ಡಿ ಒಂದು ಪೂರ್ವಾಗ್ರಹಪೀಡಿತ ಸಂಸ್ಥೆಯಾಗಿದೆ, ಡಿಕೆಶಿ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಿಲ್ಲಿಸಿದ್ದಾರೆ, ಡಿಕೆಶಿ ತಂದೆ ಮೃತರಾದ ಬಳಿಕ ಪಿತ್ರಾರ್ಜಿತ ಆಸ್ತಿಯೂ ಬಂದಿದೆ, ವಿನಾಃ ಕಾರಣ ಕಸ್ಟಡಿಯಲ್ಲಿಟ್ಟುಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು.
ಡಿಕೆಶಿ ಪರ ಮುಕುಲ್ ರೋಹಟಗಿ ಕೂಡ ವಾದ ಮಂಡಿಸಿ, ಡಿಕೆಶಿ ಏಳು ಬಾರಿ ಶಾಸಕರಾಗಿದ್ದಾರೆ, ಪಬ್ಲಿಕ್ ಫಿಗರ್ ಕೂಡ ಹೌದು. ಡಿಕೆಶಿ ಮನೆಯಲ್ಲಿ ಸಿಕ್ಕ ೪೧ ಲಕ್ಷ ತಮ್ಮದೆಂದು ಹೇಳಿಕೊಂಡಿದ್ದಾರೆ, ದೆಹಲಿಯಲ್ಲಿ ಸಿಕ್ಕ ಹಣಕ್ಕೆ ಅವರು ಜವಾಬ್ದಾರರಲ್ಲ, ಐಟಿ ದಾಳಿ ನಡೆದು ಎರಡು ವರ್ಷಗಳಾಗಿವೆ, ಡಿಕೆಶಿ ಪಾಸ್ಪೋರ್ಟ್ ಬೇಕಾದರೂ ಜಪ್ತಿ ಮಾಡಿ ಆದರೆ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಎಂದು ಕೇಳಿಕೊಂಡರು.
ಜಾರಿ ನಿರ್ದೇಶನಾಲಯದ ಪರ ವಕೀಲರು ಪ್ರತಿವಾದ ಮಂಡಿಸಿ, ಡಿಕೆ ಶಿವಕುಮಾರ್ಗೆ ಅಗತ್ಯ ಚಿಕಿತ್ಸೆ ನೀಡಿದ್ದೇವೆ, ಕಸ್ಟಡಿ ವೇಳೆ ಆರೋಗ್ಯ ತಪಾಸಣೆ ನಡೆಸಿದ್ದೇವೆ, ಡಿಕೆಶಿ ಪ್ರಭಾವಿ ವ್ಯಕ್ತಿ, ಸಾಕ್ಷ್ಯ ನಾಶ ಸಾಧ್ಯತೆ ಇದೆ, ಡಿಕೆಶಿಗೆ ನ್ಯಾಯಾಂಗ ಬಂಧನ ಅನಿವಾರ್ಯ ಎಂದು ಕೇಳಿಕೊಂಡರು.
ವಾದ ಹಾಗೂ ಪ್ರತಿವಾದಗಳನ್ನ ಆಲಿಸಿದ ಮೇಲೆ ನ್ಯಾಯಮೂರ್ತಿಗಳು, ಆರೋಪಿಗಳೆಲ್ಲಾ ಸೇರಿಕೊಂಡು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ, ಡಿಕೆಶಿ ಲೆಕ್ಕವಿಲ್ಲದ ೧೪೩ ಕೋಟಿ ರೂಪಾಯಿ ವ್ಯವಹಾರ ಮಾಡಿದ್ದಾರೆ, ಹಣಕ್ಕೆ ಅಗತ್ಯ ದಾಖಲೆ ಒದಗಿಸಿಲ್ಲ ಹಾಗಾಗಿ ನ್ಯಾಯಾಂಗ ಬಂಧನ ಮುಂದುವರಿಯಲಿ ನಾಳೆ ವಿಚಾರಣೆ ನಡೆಸೋದಾಗಿ ಹೇಳಿದರು.