ಈ ಮೊದಲೇ ಹೇಳಿದಂತೆ ಅತ್ತಿಮರ ಬಹುತೇಕ ಎಲ್ಲರಿಗೂ ಗೊತ್ತೇ ಇರುತ್ತೆ. ಈಗಾಗಲೇ ಅತ್ತಿಮರದ ಉಪಯೋಗಗಳನ್ನ ತಿಳಿದುಕೊಂಡಿದ್ದೀರಿ. ಆದೇ ರೀತಿ, ಅತ್ತಿಮರಕ್ಕೆ ವಿಶೇಷ ರೀತಿಯ ಪೌರಾಣಿಕ ಹಿನ್ನೆಲೆ ಇದೆ.
ಅತ್ತಿ ಹಣ್ಣಿನ ಪೌರಾಣಿಕ ಹಿನ್ನಲೆ ಏನು..?
ಹಿರಣ್ಯಕಶಿಪುವನ್ನು ಸಂಹರಿಸಲು ನರಸಿಂಹಸ್ವಾಮಿ ಈ ಅತ್ತಿಮರದಲ್ಲಿಯೇ ಅವತರಿಸಿದನು ಎಂಬ ಪ್ರತೀತಿ ಇದೆ. ಹಾಗೆ ಕ್ರುದ್ರನಾಗಿ ಅವತರಿಸಿದ ವಿಷ್ಣು, ಹಿರಣ್ಯಕಶಿಪುವಿನ ಉದರವನ್ನು ತನ್ನ ಉಗುರುಗಳಿಂದ ಬಗೆದು, ಅವನ ಕರುಳು ತೆಗೆದು ಮಾಲೆಯಂತೆ ಕೊರಳಿನಲ್ಲಿ ಧರಿಸಿ, ನಾರದ ಕಶ್ಯಪ ಪ್ರಹ್ಲಾದ ಭಕ್ತರ ಮಾತುಗಳನ್ನ ಸತ್ಯಗೊಳಿಸಿದನು.
ಆ ರಾಕ್ಷಸನ ಹೊಟ್ಟೆ ಅಗೆದು ಕರುಳು ಹೊರಗೆ ತೆಗೆದಾಗ, ಅವನ ಹೊಟ್ಟೆಯಲ್ಲಿದ್ದ ಕಾಲಕೂಟದಂತಹ ವಿಷವು, ನರಸಿಂಹಸ್ವಾಮಿಯ ಉಗುರುಗಳಿಗೆ ಅಂಟಿಕೊಂಡು ನೋವು ಹಾಗೂ ಉರಿ ಆಗುತ್ತದೆ. ಆ ವೇದನೆಯನ್ನು ತಡೆಯಲಾರದ ನರಸಿಂಹ, ತಾವಪನ್ನು ಶಾಂತಗೊಳಿಸಲು ಶ್ರೀ ಮಹಾಲಕ್ಷ್ಮೀ ಆಗ ಅತ್ತಿ ಮರದ ಹಣ್ಣುಗಳನ್ನು ತಂದು ಉಗುರುಗಳಿಗೆ ಹಚ್ಚಿದಳು. ತಕ್ಣವೇ ವಿಷದಿಂದ ಉಂಟಾಗಿದ್ದ ಉರಿ ಶಮನವಾಗಿ, ನರಸಿಂಹಸ್ವಾಮಿ ಶಾಂತರಾದರು.
ಆಗ ಆ ದೇವ ದಂಪತಿ, ವಿಷದ ಉಗ್ರತೆಯನ್ನು ಶಾಂತಗೊಳಿಸಿದ ಅತ್ತಿಮರಕ್ಕಕೆ ವರ ನೀಡಿದರು. ” ಎಲೈ ಔದುಂಬರವೇ ಕಲ್ಪವೃಕ್ಷದಂತೆ ಸದಾ ಫಲಭರಿತವಾಗಿರು. ನಿನ್ನನ್ನು ಶ್ರದ್ಧಾ ಭಕ್ತಿಗಳಿಂದ ಸೇವಿಸುವವರು ಇಷ್ಟಾರ್ಥ ಸಿದ್ಧಿಯಾಗಲಿ. ಅವರ ಪಾಪಗಳು ಕ್ಷಯವಾಗಲಿ. ನಿನ್ನ ದರ್ಶನದಿಂದಲೇ ವಿಷದ ತೀವ್ರತೆ ಶಮನವಾಗುತ್ತದೆ. ಲಕ್ಷ್ಮೀ ದೇವಿ ಸಹಿತನಾದ ನಾನು, ಉಳಿದ ದೇವತೆಗಳೊಡನೆ ನಿನ್ನಲ್ಲಿ ನೆಲೆಸಿರುತ್ತೇನೆ” ಎಂದು ಅನೇಕ ವರಗಳನ್ನು ನೀಡಿದರು.
ಹೀಗಾಗಿಯೇ, ಕಲಿಯುಗದಲ್ಲಿ ಔದುಂಬರ ವೃಕ್ಷವು, ಕಲ್ಪವೃಕ್ಷಕ್ಕೆ ಸಮಾನವಾದದ್ದು. ಅದೇ ಕಾರಣದಿಂದಲೇ ಶ್ರೀಗುರುವು ಕೂಡ ಔದುಂಬರದ ನೆರಳಿನಲ್ಲಿ ನೆಲೆಸಿರುವರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀಗುರುವು ನೆಲಸಿದ್ದರಿಂದಲೇ ಔದುಂಬರ ವೃಕ್ಷವು ಸರ್ವ ಕಾಮ ಫಲಪ್ರದವಾಯಿತು ಎಂಬುದು ಹಿಂದೂಗಳ ಧಾರ್ಮಿಕ ನಂಬಿಕೆ.